Ranjani Raghavan Instagram – ಕಥೆಕೂಟ ಸಮಾವೇಶ ೨೦೨೩ (ಅಕ್ಟೋಬರ್ ೨೮-೨೯)
ಲಿಟ್ ಫ಼ೆಸ್ಟ್ ನ ಶಿಸ್ತು, ಕಾಲೇಜ್ ಫ಼ೆಸ್ಟ್ ನ ಮಸ್ತಿ
ಬೆಂಗಳೂರಿನಿಂದ ಕಾರ್ ಪೂಲಿಂಗ್ ಮಾಡಿಕೊಂಡು ಹೊರಟು, ಮನೆಯಿಂದ ಮಾಡಿಕೊಂಡು ಬಂದ ತಿಂಡಿಯನ್ನು ದಾರಿ ಮಧ್ಯೆ ಒಟ್ಟಿಗೆ ಸವಿದು, ಹರಿಹರದ ಆಶ್ರಮದಲ್ಲಿ ಶ್ವಾಸಗುರುಗಳು- ವಚನಾನಂದರನ್ನು ಭೇಟಿಯಾಗಿ, ಮಠದ ಪ್ರಸಾದ-ದರ್ಶನ ಹಾಡು, ವಚನಗಾಯನ ಮುಗಿಸೋಷ್ಟರಲ್ಲಿ ಗುಂಪಿನಲ್ಲಿ ಹೆಸರುಗಳಾಗಿ ಪರಿಚಯವಾಗಿದ್ದವರೆಲ್ಲರ ಮುಖಪರಿಚವಾಯ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಕರು, ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸೋ ವ್ಯಕ್ತಿತ್ವ. ಅತಿಥಿಗಳಾದ ಟಿಎನ್.ಎಸ್ ಸರ್, ರಾಘವೇಂದ್ರ
ಪಾಟೀಲ್ ಸರ್ ಮತ್ತು ಬಿ.ಆರ್.ಎಲ್ ಸರ್ ಒಡನಾಟ ಅವಿಸ್ಮರಣೀಯ. ಚಿಕ್ಕಂದಿನಿಂದಲೂ ಸ್ಪರ್ಧೆಗಳಲ್ಲಿ ಭಾವಗೀತೆಗಳನ್ನು ಹಾಡುವ ಮುನ್ನ ಹೆಮ್ಮೆಯಿಂದ ರಚನಕಾರರ ಹೆಸರನ್ನು ಹೇಳುತ್ತಿದ್ದವಳಿಗೆ, ಅವರೊಂದಿಗೆ ಆತ್ಮೀಯತೆಯಿಂದ ಮಾತನಾಡುವ, ವಿಚಾರವಿನಿಮಯ ಮಾಡಿಕೊಳ್ಳೋ ಅವಕಾಶ ಸಿಕ್ಕಿರುವುದು ಸಾರ್ಥಕಭಾವನೆ ಮೂಡಿಸುತ್ತದೆ.
ಮೊದಲ ಬಾರಿಗೆ ನಾನು ಗೋಷ್ಠಿಯೊಂದರ ನಿರ್ವಹಣೆ ಮಾಡಿದ್ದು, ಮತ್ತು ಇತರೆ ಗೋಷ್ಠಿಗಳ ಚರ್ಚೆಯಿಂದ ದೊರೆತ “ಟೇಕ್ ಅವೇ” ಅಪಾರ. ನಾನು ಬರೆಯುವ ಕಥೆ ನನ್ನದಾಗಿ, ನನ್ನ ಊರಿನದ್ದಾಗಿ ಈ ಕಾಲಕ್ಕೆ ಸೇರಿದ್ದಾಗಿ, ಪರಂಪರೆಯ ಭಾವನೆಯನ್ನ ಉಳಿಸಿಕೊಂಡು, ಓದುಗನು ಅದನ್ನು ತನ್ನದಾಗಿಸಿಕೊಂಡಾಗ ಅದು ಜನಪ್ರಿಯ ಕಥೆಯಾಗಿ ಪರಿಪೂರ್ಣವಾಗುತ್ತದೆ ಅನ್ನೋ ವಿಚಾರ ನನ್ನನ್ನು ಪುಳಕಗೊಳಿಸಿದೆ.
ಕಥೆಕೂಟದ ಲೋಗೋ ಇದ್ದ ಟೀಶರ್ಟ್ ಧರಿಸಿದ ನಮ್ಮನ್ನ ರೆಸಾರ್ಟ್ ನವರು ಎನ್.ಎಸ್.ಎಸ್ ವಿದ್ಯಾರ್ಥಿಗಳೆಂದುಕೊಂಡದ್ದಕ್ಕೆ ಗುಂಪಿನ ಉತ್ಸಾಹ ಮತ್ತು ಶಿಸ್ತೇ ಕಾರಣ. ನಲವತ್ತೈಕ್ಕಿಂತ ಹೆಚ್ಚು ಜನರಿದ್ದರೂ, ದೂರದ ಊರಿನಲ್ಲಿ ಸಮಾವೇಶ ನಡೆಸಿದರೂ ಎಲ್ಲವೂ ಅಂದುಕೊಂಡ ಸಮಯಕ್ಕೆ, ಗುಣದೋಶಗಳಿಲ್ಲದಂತೆ ನಡೆಯಿತು. ಇಷ್ಟೆಲ್ಲದರ ನಡುವೆ ಉತ್ತರ ಕರ್ನಾಟಕದ ಜವಾರಿ ಊಟ, ಎದ್ದುಬರುವಂತಿದ್ದ ನೂರಾರು ಶಿಲ್ಪಗಳನ್ನೊಳಗೊಂಡ ಸುಂದರ ರೆಸಾರ್ಟ್, ಹಾಡು-ಹರಟೆ-ತಮಾಷೆ, ಫ಼ೋಟೋಸೆಶನ್ ಎಲ್ಲವೂ ನಮ್ಮ ಕಾಲೇಜು ಫ಼ೆಸ್ಟನ್ನ ನೆನಪಿಸಿತು. ರಾಶಿ ಖುಷಿ ನೀಡಿದ ಈ ಸುಂದರ ಅನುಭವಕ್ಕಾಗಿ ಜೋಗಿ ಸರ್ ಮತ್ತು ಕುಂಟಿನಿ ಸರ್ ಗೆ ವಂದನೆಗಳು. ಜೈ ಕಥೆಕೂಟ. Utsav Rock Garden, Shiggon | Posted on 30/Oct/2023 19:52:24



